ಮಹಾಶರಣ ಹರಳಯ್ಯ, ದೇವಿ ಭಾಗಮ್ಮ, ಜಗದ್ಗುರು ರೇಣುಕಾಚಾರ್ಯ ಪಗಡೆ ಸೇರಿದಂತೆ ಈಗಾಗಲೇ ೧೨ ಚಿತ್ರಗಳನ್ನು ನಿರ್ದೇಶಿಸಿದ ಪುರುಷೋತ್ತಮ್ ಅವರು ಈಗ ಕಾಯಕಯೋಗಿ ಎಂಬ ಮತ್ತೊಂದು ಐತಿಹಾಸಿಕ ಚಿತ್ರವನ್ನು ನಿರ್ದೇಶಿಸಲು ಮುಂದಾಗಿದ್ದಾರೆ. ಇವರು ನಿರ್ದೇಶಿಸಿರುವ ೧೨ ಚಿತ್ರಗಳಲ್ಲಿ ೧೦ ಚಿತ್ರಗಳು ಪೌರಾಣಿಕ ಹಿನ್ನೆಲೆ ಇರುವಂಥವು ಎನ್ನುವುದು ವಿಶೇಷ.
ನಡೆದಾಡುವ ದೇವರು ಎಂದೇ ಹೆಸರಾದ ತುಮಕೂರಿನ ಸಿದ್ಧಗಂಗಾಮಠದ ಗುರುಗಳಾದ ಶಿವಕುಮಾರ ಸ್ವಾಮೀಜಿಗಳ ಪೂರ್ವಾಶ್ರಮದ ಕಥೆಯನ್ನು ಹೇಳುವಂಥ ಕಾಯಕಯೋಗಿ ಚಿತ್ರವನ್ನು ಪುರುಷೋತ್ತಮ್ ಕೈಗೆತ್ತಿಕೊಂಡಿದ್ದಾರೆ. ಕಳೆದ ಮೇ.೧ ರಂದು ಸಿದ್ಧಗಂಗಾಮಠದಲ್ಲಿ ಈ ಚಿತ್ರದ ಮುಹೂರ್ತ ನಡೆಯಿತು. ಚಿತ್ರದ ಮೊದಲ ದೃಶ್ಯಕ್ಕೆ ಸಿದ್ಧಗಂಗಾಶ್ರೀಗಳು ಕ್ಲಾಪ್ ಮಾಡಿದರು. ಈ ಹಿಂದೆ ಜ್ಞಾನಜ್ಯೋತಿ ಸಿದ್ಧಗಂಗಾ ಚಿತ್ರದಲ್ಲಿ ೭೦೦ ವರ್ಷಗಳ ಇತಿಹಾಸ ಇರುವ ಸಿದ್ಧಗಂಗಾ ಮಠದ ಬಗ್ಗೆ ವಿವರ ನೀಡಲಾಗಿತ್ತು. ಆದರೆ ಕಾಯಕಯೋಗಿ ಚಿತ್ರದಲ್ಲಿ ಶ್ರೀಗಳ ಜನನ, ಹುಟ್ಟಿದ ಪರಿಸರ, ಬಾಲ್ಯ, ವಿದ್ಯಾಭ್ಯಾಸ, ಶ್ರೀಮಠದ ಜೊತೆ ಬಾಂಧವ್ಯ, ಮಠದ ಏಳಿಗೆಗೆ ಅವರ ಸಾಧನೆ ಹಾಗೂ ಶ್ರಮವನ್ನು ಬೆಳೆಸಿಕೊಂಡ ಬಗ್ಗೆ ಸಂಪೂರ್ಣವಾಗಿ ವಿವರಿಸಲಾಗುವುದು ಎಂದು ನಿರ್ದೇಶಕ ಹೇಳಿದ್ದಾರೆ. ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಪುರುಷೋತ್ತಮ್ ಮಠದ ಹಿರಿಯರಿಂದ ಸಾಕಷ್ಟು ಸಂಶೋಧನೆ ನಡೆಸಿ ನೈಜತೆಗೆ ಹತ್ತಿರವಾಗುವಂತೆ ಸ್ಕ್ರಿಪ್ಟ್ ಸಿದ್ಧಪಡಿಸಿಕೊಂಡಿದ್ದಾರೆ. ಅಲ್ಲದೆ ಶ್ರೀಗಳ ಅನುಮತಿಯನ್ನು ಕೂಡ ಪಡೆದುಕೊಂಡಿದ್ದಾರೆ. ಪಾರ್ಥಸಾರಥಿ ಹಾಗೂ ರಘುನಾಥ ಈ ಚಿತ್ರವನ್ನು ನಿರ್ಮಿಸುತ್ತಿದ್ದು ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು ಮತ್ತೆ ಬಂದ ವೀರಪ್ಪನ್ ಚಿತ್ರದ ಚಿತ್ರೀಕರಣ ಮುಗಿದ ನಂತರ ಈ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.